ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Friday, February 10, 2006

ಶ್ರೀನಿವಾಸ ವೈದ್ಯರ ಕಥೆ `ರುದ್ರಪ್ರಯಾಗ'ದ ಕುರಿತು ಒಂದು ಟಿಪ್ಪಣಿ

ಶ್ರೀನಿವಾಸ ವೈದ್ಯರು ೧೯೯೪ರಲ್ಲಿ ಪ್ರಕಟಿಸಿದ `ತಲೆಗೊಂದು ತರತರ' ೧೯೯೭ರಲ್ಲಿ ಪ್ರಕಟಿಸಿದ `ಮನಸುಖರಾಯನ ಮನಸ್ಸು' ಹರಟೆ ಸಂಗ್ರಹಗಳಿಂದಲೇ ಉತ್ತರ-ಕರ್ನಾಟಕದಲ್ಲಿ ಜನಪ್ರಿಯತೆ ಗಳಿಸಿದ್ದರೂ, ಕಳೆದ ವರ್ಷ ಮನೋಹರ ಗ್ರಂಥಮಾಲೆ ಪ್ರಕಟಿಸಿದ `ಹಳ್ಳ ಬಂತು ಹಳ್ಳ' ಕಾದಂಬರಿಯ ಮೂಲಕ ಸಾಹಿತ್ಯವಲಯಗಳಲ್ಲಿ ವೈದ್ಯರದು ಇತ್ತೀಚೆಗೆ ಹೆಚ್ಚು ಗಂಭೀರವಾಗಿ ಚರ್ಚಿಸಲಾಗುತ್ತಿರುವ ಹೆಸರು.

ಸದ್ಯದ ಕೇಂದ್ರೀಕೃತ, ಕೈಗಾರಿಕೀಕೃತ, ಜಾಗತೀಕರಣದ ಭರದಲ್ಲಿ ಹೊಸ ತಲೆಮಾರಿನ ಸ್ಮೃತಿಯಿಂದ ಮಾಯವಾಗುತ್ತಿರುವ ಪಟ್ಟಣ, ಗ್ರಾಮೀಣ ಸೀಮೆಯ ಜೀವನ-ಕ್ರಮ, ಭಾಷೆ, ಸಂಸ್ಕೃತಿಗಳನ್ನು ಜೀವಂತವಾಗಿ ಸೆರೆಹಿಡಿದು ಎತ್ತಿಕೊಡುವ ಪ್ರಯತ್ನ ಮಾಡುತ್ತಿರುವ ಮತ್ತು ಅದರಲ್ಲಿ ಸಫಲವಾಗುತ್ತಿರುವ ಕೆಲವು ಲೇಖಕರಲ್ಲಿ ಒಬ್ಬರಾದ ಶ್ರೀನಿವಾಸ ವೈದ್ಯರದು ಬೆಂಗಳೂರು, ಮುಂಬೈ ಮಹಾನಗರಗಳಲ್ಲಿ ಬದುಕು ಸವೆಸಿದ ನಂತರವೂ ಉತ್ತರ-ಕರ್ನಾಟಕದ, ವಿಶೇಷವಾಗಿ ಧಾರವಾಡ ಪ್ರದೇಶದ ಸಂಸ್ಕೃತಿಯಲ್ಲಿ ಬೇರೂರಿದ ಮನಸ್ಸು.

ಪ್ರಸ್ತುತ ಕಥೆ `ರುದ್ರಪ್ರಯಾಗ'ದಲ್ಲಿ (ಕಥೆ `ದೇಶಕಾಲ' ಸಾಹಿತ್ಯ ಪತ್ರಿಕೆಯ ಮೊದಲ ಸಂಪುಟದ ನಾಲ್ಕನೇಯ ಸಂಚಿಕೆಯಲ್ಲಿ ಮೊದಲು ಪ್ರಕಟಗೊಂಡಿದ್ದು, ಆಸಕ್ತರು
ಇಲ್ಲಿ ಅಂದರೆ ಅಂತರ್ಜಾಲದಲ್ಲಿ ಕನ್ನಡಸಾಹಿತ್ಯ.ಕಾಂ‍ನ ಫೆಬ್ರುವರಿ ತಿಂಗಳ ಸಂಚಿಕೆಯಲ್ಲಿ ಸಹ ಓದಬಹುದು.) ವೈದ್ಯರು ವಿಧವೆ ಕೃಷ್ಟಕ್ಕ, ಅವಳ ದತ್ತಕ ಪುತ್ರ ಗುರಣ್ಣ ಮತ್ತು ಗುರಣ್ಣನ ಮೊಮ್ಮಗಳು (ಅಮೇರಿಕನ್‍ಳನ್ನು ಮದುವೆಯಾಗಿ ಅಮೇರಿಕೆಯಲ್ಲೇ ನೆಲೆಸಿರುವ ಮಗನ ಮಗಳು) ಸೂಸನ್ ಹೀಗೆ ಮೂರು ಮುಖ್ಯ ಪಾತ್ರಗಳ ಸಂಬಂಧವನ್ನು ಕೇದಾರ-ಬದರೀ-ಪ್ರಯಾಗ ಯಾತ್ರೆಯ ಸಂದರ್ಭದ ಮೂಲಕ ಚಿತ್ರಿಸುತ್ತಾರೆ.

ಮೊದಲು ಕಥೆಯಲ್ಲಿ ಕಾಣುವ ದೋಷದ ಬಗ್ಗೆ ಗಮನಹರಿಸೋಣ.

ಸಾಂಪ್ರದಾಯಿಕತೆಯಲ್ಲಿ ಬೇರೂರಿದ ಹಿರಿವಯಸ್ಸಿನ ಪಾತ್ರಗಳಾದ ಕೃಷ್ಟಕ್ಕ ಮತ್ತು ಗುರಣ್ಣರ ಅಂತರಂಗ ಮತ್ತು ಸಂಕಟಗಳು ಓದುಗರಿಗೆ ದಕ್ಕುವಂತೆ ಸೂಸನ್‍ಳ ಅಂತರಂಗಕ್ಕೆ ಓದುಗನಿಗೆ ಪ್ರವೇಶವೇ ಇಲ್ಲದಿರುವುದು ಕಥೆಯಲ್ಲಿ ಎದ್ದುಕಾಣುವ ಮುಖ್ಯ ಲೋಪ. ಅವಳು ಯಾತ್ರಿಕರ ಜೊತೆ ಪ್ಯಾಂಟ್ ಧರಿಸಿ ಸಿಗರೇಟು ಸೇದುವ, ಜೀಪಿನ ಪಟ್ಟಿ ಹಿಡಿದು ತೂಗಾಡುವ, ಮಂಗ್ಯಾನ್ಹಾಂಗ ಕುಣಿದಾಡುವ ಚಂಚಲ ಸ್ಟಿರಿಯೋಟೈಪ್ ಆಗಿ ನಮಗೆ ಕಾಣಿಸುತ್ತಾಳೆಯೇ ಹೊರತು ಅದನ್ನು ಮೀರಿ ಪಾತ್ರ ಬೆಳೆಯುವುದೇ ಇಲ್ಲ. ಅನ್ಯ ಸಂಸ್ಕೃತಿಯಿಂದ ಬಂದ ಎಳೆ ವಯಸ್ಸಿನ ಸೂಸನ್‍ಳಲ್ಲಿ ಗುರಣ್ಣಜ್ಜನ ಬಗ್ಗೆಯೂ, ಕೃಷ್ಟಕ್ಕಜ್ಜಿಯ ಬಗ್ಗೆಯೂ, ಒಟ್ಟೂ ಪರಿಸರದ ಬಗ್ಗೆಯೂ ಇರಬಹುದಾದ ಪ್ರೀತಿ, ಅನುಮಾನ, ಆತಂಕಗಳು ಓದುಗರಿಗೆ ತಲುಪುವುದೇ ಇಲ್ಲ. ಹೀಗಾಗಿ ರುದ್ರಪ್ರಯಾಗದಲ್ಲಿ ಸಂಭವಿಸಬೇಕಾಗಿದ್ದ, ಇನ್ನಷ್ಟು ವಿಸ್ಫೋಟಕಾರಿಯಾಗಬಹುದಾಗಿದ್ದ, ಮೂರು ತಲೆಮಾರುಗಳ `ಸಂಗಮ' ಅಪೂರ್ಣವೆನಿಸುತ್ತದೆ. ಇದು ಕಥೆಯ ಬಗೆಗಿನ ಅತೃಪ್ತಿ.

ಲೇಖಕರ ಶಕ್ತಿ ಇರುವುದು ಪಾರಂಪರಿಕ ಭಾಷೆಯಲ್ಲಿ ವಿವರಗಳನ್ನು, ಸೂಕ್ಷ್ಮಗಳನ್ನು ದಾಖಲಿಸುವಲ್ಲಿ (`ಅಂಟಿನ ಉಂಡಿಗೆ ಒಣಖೊಬ್ಬರಿ ಯಾವಾಗ ಹಾಕಬೇಕು, ಉತ್ತತ್ತಿ ಎಷ್ಟು ಸಣ್ಣದಾಗಿ ಹಚ್ಚಬೇಕು..'). ಕೃಷ್ಟಕ್ಕನ ಕ್ಷೋಭೆಯನ್ನು ದಾಟಿಸುವಲ್ಲಿ; ಅವಳ ದೃಷ್ಟಿಯಲ್ಲಿ ಅವಳ ಗಂಡನ ಸಾವಿಗೆ ಕಾರಣರಾದ ಅವಳ ಗಂಡ ಇಟ್ಟುಕೊಂಡ ಮುಳುಗುಂದದ ಸಕೇಶಿ ಮತ್ತವಳ ಮಗ ಬಿಂದ್ಯಾನೊಂದಿಗಿನ ಈರ್ಷ್ಯೆಯನ್ನು ಮೂಡಿಸುವಲ್ಲಿ. (`ನನಗ ಮಕ್ಕಳಾಗಲಿಲ್ಲೆರವ ಪಾಪಿ ನಾನು..ಖರೆ..ಆದರ ಆಗಿನ ಕಾಲದ ಲೋಕಾರೂಢಿ ಪ್ರಕಾರ ಇನ್ನೊಂದು ಲಗ್ನ ಮಾಡಿಕೋಬೇಕಾಗಿತ್ತು..ಯಾರು ಬ್ಯಾಡಾ ಅಂತಿದ್ರು..ಅದು ಬಿಟ್ಟು ಅಡಿಗೀ ಮಾಡಿ ಹಾಕಲಿಕ್ಕೆ ಅಂತ ಬಂದ ಆ ಮುಳಗುಂದದ ಸಕೇಶಿ..ಅಕೀ ಸಂಗತೀನ...' ). ಇದೆಲ್ಲವೂ ಪ್ರಯಾಗದ ಪ್ರವಾಸದ ಭಾವೋನ್ಮತ್ತತೆಯಲ್ಲಿ ತಾರಕಕ್ಕೇರುತ್ತದೆ. ಮ್ಲೇಚ್ಛ ಸಂಸ್ಕೃತಿಯಿಂದ ಬಂದ ಸೂಸನ್‍ಳ ಬಗೆಗೆ ಏನೇ ಕಸಿವಿಸಿಯಿದ್ದರೂ ಅವಳ ಗಾಯದ ಕಾಲಿಗೆ ಬೇರು ತೇದು ಹಚ್ಚುವಾಗ ವಾತ್ಸಲ್ಯ ಮಿಡಿಯುವ ಮೂಲಕ ಪಾತ್ರದ ಪೂರ್ಣತೆ ಓದುಗನ ಅರಿವಿಗೆ ದಕ್ಕುತ್ತದೆ.

ದತ್ತಕ ತಾಯಿ ಕೃಷ್ಟಕ್ಕನ ಜೊತೆ ಬದುಕು ತೊಡಕಾಗಿಸಿಕೊಂಡು, ತಿಳುವಳಿಕೆ ಬಂದ ಮೇಲೂ ಝಾಡಿಸಿ ಒದ್ದು ಈಚೆ ಬರುವ ಇಚ್ಛೆ ಇದ್ದರೂ, ತನ್ನ ಸಹಜ ಮೃದು ಸ್ವಭಾವದಿಂದ ಬರಲಾರದೇ ಒದ್ದಾಡುವ ಗುರಣ್ಣನಿಗೆ ತನ್ನಿಂದ ಸಾಧ್ಯವಾಗದ ಸ್ವಚ್ಛಂದತೆ ದಕ್ಕಿಸಿಕೊಂಡಿರುವ ಸೂಸನ್‍ಳನ್ನು, ದೂರವಾದ ಮಗನ ಕೊರಗಿನಲ್ಲಿ ಸಾವು ಕಂಡ ಹೆಂಡತಿಯನ್ನು ನೆನೆದು, ತನ್ನ ಬದುಕಿನ ವೈಫಲ್ಯದ ದ್ಯೋತಕ ಎಂದುಕೊಳ್ಳುವುದೂ, ಆದರೆ ಜೊತೆಜೊತೆಗೆ ತನಗೆ ಸಾಧಿತವಾಗದ್ದು ತನ್ನ ಪ್ರತಿಭಾವಂತ ಮಗನಿಗೆ ಸಾಧಿತವಾಗಿ ತನ್ಮೂಲಕ ಮೊಮ್ಮಗಳಲ್ಲಿ ಅಭಿವ್ಯಕ್ತವಾಗಿದ್ದನ್ನು ಕಂಡು ಧೈರ್ಯ ಪಡೆದುಕೊಳ್ಳುವುದೂ, ಹೀಗೆ ಗುರಣ್ಣನ ಮನಸ್ಸಿನ ತುಮುಲ ಅನಾವರಣಗೊಳ್ಳುತ್ತದೆ. ಆದರೂ ಕೃಷ್ಟಕ್ಕನಷ್ಟು ಪೂರ್ಣವಾಗಿ ಗುರಣ್ಣ ನಮಗೆ ದಕ್ಕುವುದಿಲ್ಲ.

ಆದರೆ ಒಟ್ಟಿನಲ್ಲಿ ತಮ್ಮ ಮೂಲ ಸಂಸ್ಕೃತಿಯಲ್ಲಿ ಬೇರೂರಿದ ಪಾತ್ರಗಳನ್ನು ಅರಿಯುವುದರಲ್ಲಿ, ಅನಾವರಣಗೊಳಿಸುವುದರಲ್ಲಿ, ಧಾರವಾಡದ ಪಾರಂಪರಿಕ ಭಾಷೆಯಲ್ಲಿ ವಿವರಗಳನ್ನು ದಾಖಲಿಸುವಲ್ಲಿ ವೈದ್ಯರ ಪ್ರತಿಭೆ ದೊಡ್ಡದು ಎಂಬುದು `ಶ್ರದ್ಧಾ', `ಗಾಯಕವಾಡ ದಾದಾ', `ಹಳ್ಳ ಬಂತು ಹಳ್ಳ' ಕೃತಿಗಳ ನಂತರ ಮತ್ತೊಮ್ಮೆ ಸಾಬೀತಾಗುತ್ತದೆ.

2 Comments:

Blogger Sudarshan said...

ಸೂಸನ್‍ಳ ಪತ್ರವನ್ನು ಬೇರೋಂದು ಬಗೆಯಲ್ಲಿ ನೋಡುವ ಬಗೆಯೊಂದನ್ನು ತೋರಿಸಿದ್ದಕ್ಕೆ ಧನ್ಯವಾದ. ಆದರೂ ಈ ಪಾತ್ರ ನಿರ್ವಹಿಸುವಲ್ಲಿ ಕತೆಗಾರರು ಸೋತಿದ್ದಾರೆ ಎಂದೇ ನನ್ನ ಅನಿಸಿಕೆ.



ಬ್ಲಾಗ್ ಓದುವವರಿಗಿಂತ ಬರೆಯುವವರ ಸಂಖ್ಯೆ ಜಾಸ್ತಿ ಇರಬಹುದೆಂಬ ನಿಮ್ಮ ಊಹೆ ಸರಿಯೇ ಇರಬಹುದು. ಆದುದರಿಂದಲೇ ಬ್ಲಾಗ್‍ಗಳು ಗುಣಮಟ್ಟ ಮತ್ತು ಜವಾಬ್ದಾರಿಯ ದೃಷ್ಟಿಯಿಂದ ಹೆಚ್ಚಿನ ವಿನಯಶೀಲ ಪ್ರಯತ್ನ ಮಾಡಬಹುದಾಗಿದೆ.

Sunday, February 12, 2006 2:56:00 AM  
Anonymous Anonymous said...

ಸುದರ್ಶನ, ಪ್ರೀತಿ..



ನಮಸ್ಕಾರಗಳು. ಸೃಜನ ಕನ್ನಡಿಗ ಓದಿದೆ. ಬಹಳ ಚೆನ್ನಾಗಿ ಬರುತ್ತಿದೆ. ಅಭಿನಂದನೆಗಳು.

ಶ್ರೀನಿವಾಸ ವೈದ್ಯರವರ 'ರುದ್ರಪ್ರಯಾಗ' ದ ಬಗ್ಗೆ ನೀವು ಬರೆದಿರುವ ಟಿಫ್ಫಣಿ ಓದಿದೆ. ಖುಷಿಯಾಯಿತು. ಆ ಕಥೆ ನನಗೂ ತುಂಬಾ ಹಿಡಿಸಿತು. ಆದರೆ, ಕಥೆಯಲ್ಲಿ ಎದ್ದು ನಿಲ್ಲುವುದು ಕೃಷ್ಣಕ್ಕಳ ಪಾತ್ರ ಒಂದೇ. ದತ್ತಕ ಕೊಂಡ ಗುರಣ್ಣನ ಬಗ್ಗೆ ಆಕೆಗಿದ್ದ 'ಇನ್‌ಡಿಫ಼ೆರೆನ್ಸ್' ಬದರೀನಾರಾಯಣನ ಸಮ್ಮುಖದಲ್ಲಿ ಪೂರಾ ಕರಗಿಹೋಗಿಬಿಡುವುದು ಆಕೆಯ ಸಾಂಸ್ಕೃತಿಕ ಹಿನ್ನೆಲೆಯಲ್ಲಿನ ಅಥವಾ ಗುರಣ್ಣನ ಬಗೆಗಿನ ಆಕೆಯ ಯಾವುದೇ ಭಾವನೆಗಳ 'ಮೆಟಮಾರ್ಫ಼ಸಿಸ್' ಆಗಿ ನನಗೆ ಕಾಣಲಿಲ್ಲ. ಬದಲಿಗೆ, ಜೀವಮಾನದ ಮಹತ್ತರವಾದ ಆಶೆಯನ್ನು ಮತ್ತು ದುರ್ಗಮಯಾತ್ರೆಯನ್ನು ಕೈಗೊಂಡ ಒಬ್ಬ ಮಾಧ್ವಮುದುಕಿಯ ದೈವೀ ಪರವಶತೆಯ ಒಂದು ಟ್ರಾನ್ಸ್ ಸ್ಥಿತಿಯಂತೆ ನನಗನ್ನಿಸಿತು.



ಗುರಣ್ಣನ ಕೀಳರಿಮೆ ಮತ್ತು ಸುಸಾನಳು ಬಂದಮೇಲೆ ಹೆಚ್ಚಿಕೊಳ್ಳುವ ಆತನ ಆತ್ಮಸ್ಥೈರ್ಯ ಕೇವಲ ಒಂದು ವಾಕ್ಯದಲ್ಲಿನ ವಾಚ್ಯವಾಗಿ ಮಾತ್ರ ಬಂದಿದೆ. ಕೃಷ್ಣಕ್ಕ ತನ್ನ ಮಾತಿನಿಂದ ಕಥೆಯಿಡೀ ಕಂಗೊಳಿಸುತ್ತಾಳೆ. ನನಗಿಷ್ಟವಾದದ್ದು ವೈದ್ಯರ ವಿವರಗಳು. ನೀವು ಉಲ್ಲೇಖಿಸಿರುವುದರ ಜತೆಗೆ 'ಗ್ಯಾಸ್‌ನ ಸಿಮ್' ಇತರೇಗಳು ಕಥೆಯ ಯಶಸ್ಸಿಗೆ ಕಾರಣವಾಗುತ್ತದೆ.



ಒಟ್ಟಿನಲ್ಲಿ ನಾನೋದಿದ ಇನ್ನೊಂದು ಉತ್ತಮ ಕಥೆ.



ವಸ್ತಾರೆಯವರ ಕಥೆಗಳನ್ನು ಓದಿದ್ದೀರಿ ಅಂದುಕೊಂಡಿದ್ದೇನೆ. ನಾನು ಮೂರೂ ಕಥೆಗೆಳನ್ನು ಓದಿದೆ. ಜತೆಗೆ ಇನ್ನೊಂದು. ಪ್ರಜಾವಾಣಿಯಲ್ಲಿ ಬಂದ 'ಒಂದು ಬಸಿರ ಕಥಾನಕ' ಆತ್ಮಕಥಾನಕವೆನ್ನಿಸಿವ ಅವರ ನಗರೀ ಕಥೆಗಳು ನಗರಗಳ ಕನ್ನಡೇತರ ವಿವರಗಳನ್ನು ಧಾರಾಳವಾಗಿ ಕೊಟ್ಟುಕೊಂಡು ಕಾವ್ಯಮಯವಾದ ಕಥನಕ್ರಮದಿಂದ ಮನದಲ್ಲಿ ನಿಲ್ಲುತ್ತವೆ. ನಾನು ಗಮನಿಸಿದ್ದೆಂದರೆ, ಕಥಾವಸ್ತುಗಿಂತ ಕೆಲವು ವಿವರಗಳೇ ಮನದಲ್ಲಿ ನಿಲ್ಲುವುದು. ಆದರೆ, ಹೊಸ ರೀತಿಯ ಮನಸೆಳೆಯುವ ಕಥನ ಶೈಲಿ.



ಮತ್ತೆ ಪತ್ರಿಸಿ. ಪ್ರೀತಿಗೆ ನೆನಪುಗಳು



ಗುರು

Wednesday, February 15, 2006 2:00:00 PM  

Post a Comment

<< Home