ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Monday, December 19, 2005

ಶ್ರೀಧರ್ ಮೂರ್ತಿ ಅವರ 'ಮಲ್ಲಿಗೆ'

ಮುಂಬೈ-ನಲ್ಲಿ ಇರುವಾಗ ನಾನು ಎರಡು ಪ್ರಪಂಚಗಳ ನಡುವೆ ಓಡಾಡುತ್ತೇನೆ. ಒಂದು ಐ.ಐ.ಟಿ.-ಹೀರಾನಂದಾನಿ ಇಂಥಾ ಮೇಲ್ಮುಖವಾದ ಪ್ರದೇಶ. ತಿಂಗಳಿಗೊಮ್ಮೆಯಾದರೂ ಸಂಬಂಧಿಕರ ಮನೆಗೆಂದು ಡೊಂಬಿವಿಲಿ ಉಪನಗರಕ್ಕೆ ಲೋಕಲ್ ಟ್ರೈನ್ ಹಿಡಿದು ಹೋಗುತ್ತೇನೆ. ಕನ್ನಡಿಗರು ಹೆಚ್ಚು ವಾಸಿಸುವ ಮಧ್ಯಮ-ಕೆಳ ಮಧ್ಯಮ ವರ್ಗದ ಡೊಂಬಿವಿಲಿಯ ಪ್ರಪಂಚದಲ್ಲಿ `ಮಲ್ಲಿಗೆ' ಕೊಳ್ಳಲು ಸಿಗುತ್ತದೆ ಎಂಬುದೂ ಒಂದು ಆಕರ್ಷಣೆಯಾಗಿರುತ್ತದೆ.

ಡಿಸೆಂಬರ್ ತಿಂಗಳ `ಮಲ್ಲಿಗೆ' ಸಂಚಿಕೆಯಲ್ಲಿ ಶ್ರೀಧರ್ ಮೂರ್ತಿ ತಮ್ಮ `ಬೆಳಕಿನ ಬೆರಗು' ಅಂಕಣದಲ್ಲಿ ಕಾಲ್ ಸೆಂಟರ್‍‍ಗಳು ಮತ್ತು ಐ.ಟಿ. ಉದ್ಯಮ ಮಧ್ಯಮ-ವರ್ಗದಲ್ಲಿ ಸೃಷ್ಟಿಸುತ್ತಿರುವ ಸಾಂಸ್ಕೃತಿಕ ತಲ್ಲಣಗಳ ಕುರಿತು, ಆರ್ಥಿಕ ಅಸಮಾನತೆ, ಒತ್ತಡಗಳು, ಅವು ನಾಶ-ಮಾಡುತ್ತಿರುವ ಅಮೂರ್ತಮೌಲ್ಯಗಳ ಕುರಿತು ಕೆಲವು ವಾಸ್ತವದ ಉದಾಹರಣೆಗಳ ಸಹಿತ ಅಪಾರ ಕಾಳಜಿಯಿಂದ ಬರೆದಿದ್ದಾರೆ. ಕಾಲ್ ಸೆಂಟರಿನ ಉದ್ಯೋಗಸ್ಥೆ ಪ್ರತಿಭಾ ಅವರ ದುರಂತ ಇನ್ನೂ ಹಸಿಯಾಗಿ ನಮ್ಮ ಮನಸ್ಸಿನಲ್ಲಿದೆ. ಈ ಹಿನ್ನೆಲೆಯಲ್ಲಿ ಶ್ರೀಧರ್ ಅವರ ಲೇಖನ ಜಾಗತೀಕರಣ ಪ್ರಕ್ರಿಯೆಯ ಇನ್ನೊಂದು ಮಗ್ಗುಲನ್ನು ತೆರೆದಿಡುತ್ತದೆ. ಶ್ರೀಧರ್ ಅವರ ದೃಷ್ಟಿಯಲ್ಲಿ "ಇಂದು ರೂಪಗೊಳ್ಳುತ್ತಿರುವುದು ಅಂತರಿಕ ಇಚ್ಛೆಯಿಂದ ರೂಪಗೊಳ್ಳದೇ ಬಾಹ್ಯ ಒತ್ತಡದಿಂದ ಸಿದ್ಧವಾಗುತ್ತಿರುವ ಆರ್ಥಿಕ ಸಮಾಜ. ಇಂತಹದು ಸಹಜವಾಗೇ ಪ್ರಗತಿಪರವಾಗುವುದು ಸಾಧ್ಯವಿಲ್ಲ, ಮಾತ್ರವಲ್ಲ ದೀರ್ಘವ್ಯಾಪ್ತಿ ಪಡೆಯುವುದೂ ಸಾಧ್ಯವಿಲ್ಲ. ಇದನ್ನು ನಿಯಂತ್ರಿಸಲು ನಮ್ಮ ರಾಜಕೀಯ ಮತ್ತು ನ್ಯಾಯಾಂಗ ವಲಯಗಳಿಗೂ ಸಾಧ್ಯವಾಗದಿರುವುದರಿಂದ ಅಂತಿಮವಾಗಿ ಒಂದು ವಿನಾಶಕಾರಿ ಹಂತಕ್ಕೆ ಬದಲಾಗುತ್ತಿರುವುದು ಸ್ಪಷ್ಟವಾಗಿದೆ." ಈ ಹಿನ್ನೆಲೆಯಲ್ಲಿ ಪ್ರಜಾವಾಣಿ ಸುವರ್ಣ ಸಂಚಿಕೆ ಸೇರಿದಂತೆ ಇನ್ನೂ ಕೆಲವು ವೇದಿಕೆಗಳಲ್ಲಿ ಗಿರೀಶ ಕಾರ್ನಾಡರ ಆಧುನಿಕತೆಯ ಪರವಾದ, ಉದ್ಯೋಗದಲ್ಲಿ ತುರುಸಿನ ಸ್ಪರ್ಧೆ, ವ್ಯಕ್ತಿವಾದ ಇತ್ಯಾದಿಗಳನ್ನು ಬೆಂಬಲಿಸುವ ಲೇಖನಗಳನ್ನು, ಹೇಳಿಕೆಗಳನ್ನು ಕೂಡಾ ನಾವು ಗಮನಿಸಬಹುದು. "ನಮ್ಮ ಸಾಂಸ್ಕೃತಿಕ ಕ್ಷೇತ್ರ ಜಾಗತೀಕರಣದ ಪರಿಣಾಮಗಳನ್ನು ಸರಿಯಾಗಿ ವಿಶ್ಲೇಷಿಸುತ್ತಿಲ್ಲ ಎಂಬುದಕ್ಕೆ ಗಿರೀಶ್ ಕಾರ್ನಾಡರ ಇತ್ತೀಚಿನ ಹೇಳಿಕೆಗಳೇ ಸಾಕ್ಷಿ" ಎಂದು ಶ್ರೀಧರ್ ಮೂರ್ತಿ ಲೇಖನದಲ್ಲಿ ನುಡಿದಿದ್ದಾರೆ.

ಶ್ರೀಧರ್ ಮೂರ್ತಿ ಅವರೇ ಲೇಖನದಲ್ಲಿ ಒಪ್ಪಿಕೊಳ್ಳುವಂತೆ ಇಂದಿನ ಪ್ರಕ್ರಿಯೆ ಕೆಲವು ಅನಿವಾರ್ಯತೆಗಳಿಂದ ಹುಟ್ಟಿದುದಾಗಿದೆ. ಪರಿಸ್ಥಿತಿಯ ಲಾಭ ಪಡೆಯುತ್ತಿರುವ ವರ್ಗ ದುರಾಸೆಗಳಿಗೆ ಬಲಿಯಾಗದೇ ಎಲ್ಲರನ್ನೂ ಒಳಗೊಳ್ಳುವ ರೀತಿಯಲ್ಲಿ ಪ್ರಕ್ರಿಯೆಗಳು ಚಲಿಸುವಂತೆ ನೋಡಿಕೊಳ್ಳುವ ಪ್ರಯತ್ನ ಮಾಡಬಹುದಾಗಿದೆಯೆಂದು ಮಾತ್ರ ನಾವು ಆಶಿಸಬಹುದಾಗಿದೆ ಎನಿಸುತ್ತದೆ.

ಶ್ರೀಧರ್ ಮೂರ್ತಿ ಮತ್ತು ಅವರ `ಮಲ್ಲಿಗೆ', ಇಂದಿನ ಬಣ್ಣ,ಬಣ್ಣದ ಮಾಧ್ಯಮಗಳ ಅಬ್ಬರದಲ್ಲಿ ನಾವು ಗಮನಿಸಲೇ ಬೇಕಾದ ಮುಖ್ಯ ಸಾಂಸ್ಕೃತಿಕ ಧ್ವನಿ ಎಂಬುದರಲ್ಲಿ ಸಂಶಯವಿಲ್ಲ.

0 Comments:

Post a Comment

<< Home