ಸೃಜನ-ಕನ್ನಡಿಗ (sRujana-kannaDiga)

ಸಹೃದಯ, ವಿಶ್ವಾಸ ಮತ್ತು ಸೃಜನಶೀಲತೆ: Creator of this blog is Sudarshan. He has interest in Engineering research and Kannada writing. As a part of the process of Kannada writing, this blog will pay extra attention to cultural and philosophical aspects of Mathematics, Science, History, Language etc.

Name:
Location: Mysore, Karnataka, India

Thursday, December 15, 2005

ಅಶ್ವಿನಿ ತನ್ನ ಕತೆ ಬರೆದರೆ...

(ನಾನೊಂದು),

ಅದ್ವೈತದ ಪರಮಾವಸ್ಥೆಯ
ಬಿಂದೊಂದರ ಮಹಾಸ್ಫೋಟನೆಯೊಂದು
ಬ್ರಹ್ಮಾಂಡವಾಗರಳಿದ
ಈ ಮೊದಲಚ್ಚರಿಯ ಯಾವುದೊಂದೋ
ಬೆಚ್ಚನೆಯ ಮೂಲೆಯಲಿ
ಮುದುಡಿ ಕುಳಿತು
ಒಳಗೊಳಗೆ ಕುಸಿವ
ಅಪಾರ ಜಲಜನಕಾವೃತ
ತಿರುಗುಣಿ.



(ನಾ),

ಕುಗ್ಗಿದಂತೆಲ್ಲ ಮಿಕ್ಕುವುದು
ಒಳಗಿನಣುಗಳ
ಹಿಗ್ಗು,
ಮಿಲನ,
ಮೈಗೆ ಮೈಯುಜ್ಜುವ
ಸುಖ,
ಮುಕ್ತಪ್ರಣಯ,
ಬಿಸಿಯುಸಿರು,
ಆವೇಗ,
ಕಾವೇರಿದ ವಾತವರಣ.

-ಹೀಲಿಯಂನ
ಜನನ.





ಗುರುತ್ವದ ಆಕುಂಚನಕ್ಕೆ
ಒತ್ತಡದ ವಿಕಸನದ
ವಿಲೋಮ ವಾದ,
ಸಮತೋಲನ ಸಾಧಿಸಿದಂದು,
ಈ ತಿರುಗುಣಿ
ಲಜ್ಜೆಯನು ಜೈಸಿದ
ತರುಣಿ-
ಮಿಣಿಗುಟ್ಟುವ ಮಣಿ.



ಅನಂತಾನಂತವಾಗಿ
ಮಹಾತಾರೆಯಾಗುಳಿವ
ಹಿರಿದಾಸೆಯೇನೋ ಸರಿ-
ಅರಿತಿಲ್ಲವೆ ಇದರ
ಕ್ಷಣಿಕತೆ?

ಈ ಬೆಡಗು ಉರಿ
ಅಬ್ಬಬ್ಬಾ ಅಂದರೆ
ಇನ್ನೆರಡು ಕೋಟಿಕೋಟಿ-
ಅಬ್ದಗಳಾನಂತರ
ಸ್ತಬ್ಧವೆಲ್ಲಾ!
ಎಲ್ಲ ಉರುವಲಾರಿ.



ಒತ್ತಡಾದಸರೆಯಿಲ್ಲದೇ
ಗುರುತ್ವದ ಸೆಳೆತವೊಂದೇಯುಳಿದು
ಮತ್ತೇ ಕುಸಿತವೇ
ಗತಿಯಾದಾಗ
ಕಿಕ್ಕಿರಿದು ತುಂಬಿ,
ಉಸಿರ್ಗಟ್ಟ ವಿದ್ಯುದಾಣುಗಳು
ಎಡೆಗಾಗಿ ಹೊಡೆದಾಡಿ
ತಡೆಯೊಡ್ಡಿದರೆ,
'ಶ್ವೇತಕುಬ್ಜೆ' ಎಂಬ
ಮುದ್ದು ಅಭಿಧಾನ.



ಇಲ್ಲವಾದಲ್ಲಿ-
ಶೂನ್ಯದಲಿ ಅಂತ್ಯ.
ಅಪರಿಮಿತ ಸಾಂದ್ರತೆ
ಗುರುತ್ವತೆಯ (ಎನಗೆ)
'ಕಪ್ಪು ರಂಧ್ರ'ಎಂಬಂತೆ
ಕಳಂಕಿತೆ.

ಸಮಯಾಯಾಮಗಳ
ಹತ್ಯೆಗೈದ,
ಏನನ್ನೂ,
ಬೆಳಕನ್ನೂ,
ನುಂಗೇನೆಂಬ ಪುಟ್ಟದೈತ್ಯೆ
ಎಂಬ ಅನನ್ಯತೆ.

-ಸುದರ್ಶನ
- ೨೩ ಮಾರ್ಚ್ ೧೯೯೮


ಅಡಿಟಿಪ್ಪಣಿ: ನಕ್ಷತ್ರದ ಹುಟ್ಟು-ಸಾವಿನ ಕುರಿತ ವೈಜ್ಞಾನಿಕ ಕಥನವನ್ನು ಕನ್ನಡದ ದೇಸೀ ಪರಿಭಾಷೆಯಲ್ಲಿ ಹೇಳುವ ಯತ್ನ.

ಕೃಪೆ: http://www.kannadasaahithya.com/ (ಕನ್ನಡಸಾಹಿತ್ಯ.ಕಾಂ) ಕನ್ನಡ ಸಾಹಿತ್ಯಕ್ಕೆ ಮೀಸಲಾದ ಅಂತರ್ಜಾಲ ತಾಣ.

0 Comments:

Post a Comment

<< Home